Tuesday, July 22, 2014

ಬಾಲಕಾರ್ಮಿಕ (poem)

 
ಬಾಲಕಾರ್ಮಿಕ 
 
ಮೇಜು ಒರೆಸುವ 
ಪಾತ್ರೆ ತೊಳೆಯುವ 
ಕಸ ಗುಡಿಸುವ 
ಪುಟ್ಟ ಬಾಲಕಿಗೆ 
ತುಂಬಿದ ಹೊಟ್ಟೆ 
ಕನ್ನಡಿಯೊಳಗಿನ ಗಂಟು 
 
    ರದ್ದಿ ಹುಡುಕಲು 
    ಚಿಂದಿ ಆಯಲು 
    ಸಂದಿ-ಗೊಂದಿ 
    ಸುತ್ತುವ ಚಿಣ್ಣಗೆ 
    ಬಾಲ್ಯದ ಸೊಗಸು 
    ಹಗಲು ಕನಸು 
 
ಬೀಡಿ ಕಟ್ಟುವ 
ಊದುಬತ್ತಿ ಹೊಸೆಯುವ 
ಜೀತ ಮಾಡುವ 
ಮುದ್ದು ಮಕ್ಕಳಿಗೆ 
ಸುಖ-ಸಂತೋಷ 
ಗಗನ ಕುಸುಮ 
 
    ತನ್ನನ್ನು ಉದ್ಧರಿಸುವ 
    ಭಾಷಣ ಮಾಡುವ 
    ಸರ್ಕಾರ-ಸಂಸ್ಥೆಗಳ 
    ಆಶ್ವಾಸನೆ ಬಾಲಕಾರ್ಮಿಕನಿಗೆ 
    ನೀರ ಮೇಲಣ ಗುಳ್ಳೆ 
 
-  ತಾರಾ ಶೈಲೇಂದ್ರ 

Monday, July 21, 2014

ಒಡವೆ

               ಒಡವೆ

ಮುತ್ತೈದೆಗೆ ಒಡವೆ
ಕುಂಕುಮ, ಮೂಗುತಿ ,
ಮಾಂಗಲ್ಯ, ಬಳೆ
ಕಾಲುಂಗುರ, ಸಿಂಧೂರ .
ನಮಗೋ ಹುಚ್ಚು
ಕಂಡರೆ ಮುತ್ತು ,
ಹವಳ , ವಜ್ರ ,
ವೈಢೂರ್ಯ , ಬಂಗಾರ .
ಅನಿಸಬಹುದು ಇದು
ಬರೀ ಆಡಂಬರ , ಬಡಿವಾರ
ಆದರೆ, ಒಮ್ಮೆ ಯೋಚಿಸಿ
ಅಕ್ಕಸಾಲಿಗನಿಗೆ ಆಗಬೇಡವೆ ವ್ಯಾಪಾರ ?

- ತಾರಾ ಶೈಲೇಂದ್ರ

 

Tuesday, July 15, 2014

ನನ್ನ ಜನಕನಿಗೊಂದು ನಮನ (poem)

ಏನ ನೀಡಬಲ್ಲೆ ನಿನಗೆ ಜನಕ ?
ಕಣ್ರೆಪ್ಪೆಯಲಿಟ್ಟು ಕಾದಿರುವೆ ನನ್ನ ಈತನಕ
ಮಗುವಾಗಿದ್ದಾಗ ಹೆಗಲ ಮೇಲೆ ಹೊತ್ತು
ಪಿತೃ ಪ್ರೇಮದ ಸಂತಸದ ಸಿರಿಯನಿತ್ತು
ಬೆಳೆದಂತೆ ನನಗಾದೆ ಮಾರ್ಗದರ್ಶಕ , ದಾರ್ಶನಿಕ
ಪ್ರಪಂಚದಲೆನಗೆ ನೀ ಸತ್ಯನಿಷ್ಠೆಯ ದ್ಯೋತಕ
ನೋವಲ್ಲಿದ್ದರೂ ನಗುವ ನಿನ್ನ ಸಹನೆ-ತಾಳ್ಮೆ
ಎಲ್ಲದರಲ್ಲೂ ಅನುಕರಣೀಯ ನಿನ್ನ ಜಾಣ್ಮೆ
ಕುಟುಂಬಕ್ಕೆ ಮಾದರಿ ನಿನ್ನ ವಾತ್ಸಲ್ಯ
ಏನೇ ಆದರೂ ಕ್ಷೀಣಿಸದ ವಾಂಛಲ್ಯ
ನೀ ನನ್ನ ಜನ್ಮದಾತೆಯ ಸಹಚಾರಿ
ಅದಕೆ ಸದಾ ನಾನಿನಗೆ ಆಭಾರಿ
ಕಲಿಸಿದೆ ನನಗೆ ನ್ಯಾಯ ನೀತಿ
ಪ್ರಪಂಚದ ಎಲ್ಲಾ ರಿವಾಜು, ರೀತಿ
ಇಂದು ನೀನಾಗಿರುವೆ ಮಗುವಿನ ರೀತಿ
ನಾನೇನ ನೀಡಬಲ್ಲೆ ? ಬರೀ ಹಿಡಿಯಷ್ಟು 'ಪ್ರೀತಿ'

- ತಾರಾ ಶೈಲೇಂದ್ರ

 

ಕೃಷ್ಣಸಖಿ (poem)

                   ಕೃಷ್ಣಸಖಿ


ಮೃದುಭಾಷಿ ಸುಂದರಿ ರಾಜಕುವರಿ  ತಾ
ವರಿಸಿದಳು ಮಹಾರಾಜ ರಾಣಾ ಕುಂಭನಾ
ತೊರೆದಳು ಐಹಿಕ ಸುಖ-ಭೋಗವ
ಸೇರಿದಳು ಭಾಗವತರೊಂದಿಗೆ ದೇವಮಂದಿರವ

ಮತ್ಸರ ತಳೆದವರು ಕಳುಹಿದರು ಹಾವ
ಅದಾಯಿತು  ಪುತ್ಥಳಿಯ ಕೊರಳಿನ ಹಾರ
ಹಾಲಾಹಲವದು ಸಿಹಿ-ಸವಿಯ ಜೇನಾಯ್ತು
ಆಣಿಯ ಹಾಸು ಅರಳಿದ ಕುಸುಮದಂತಾಯ್ತು

ಬೃಂದಾವನದಿ ಹರಿಯಿತು ಅವಳ ಕೃಷ್ಣಪ್ರೇಮ
ಭವಬಂಧನ ಮರೆತು ಮನವಾಯ್ತು ನಿಷ್ಕಾಮ
ಬಂದರಾ ಅಕ್ಬರ್ ತಾನ್ಸೇನರು  ಜೊತೆಗೂಡಿ
ಸಾಧ್ವಿ ತಾನಾಗಿದ್ದಳು ಕೃಷ್ಣನ ಒಡನಾಡಿ

ಪತಿ ಬಂದನು ಜೊತೆಗಿರಲಾರೆವೇ ನಾವೆಂದು
ನುಡಿದಳಾಕೆ ಪತ್ನಿ ನಾನು ಶ್ರೀಕೃಷ್ಣನಿಗೆಂದು
ದುಃಖಿಸಿದನು  ರಾಣಾ ಸಹಿಸಲಾರದ ನೋವೆಂದು
ಅರಿತನಾಕೆ ಶ್ರೀಕೃಷ್ಣನಿಗರ್ಪಿತವಾದ ನಿರ್ಮಾಲ್ಯದ ಹೂವೆಂದು

- ತಾರಾ ಶೈಲೇಂದ್ರ


 

Wednesday, July 2, 2014

ಪದೇ ಪದೇ ನೆನಪಾದೆ ( poem)

 
 
ಪದೇ  ಪದೇ  ನೆನಪಾದೆ
 
 

ಹೀಗೆಯೇ ಮತ್ತೊಂದು ವರ್ಷ ಸಂದಿದೆ
ನಿನ್ನ ನೆನಪು ಮರುಕಳಿಸಿ ಬಂದಿದೆ
ಹೇಗೆ ಕಳೆದೆವೊ ನೀನಿರದ ಹಗಲುಗಳ ,
ನಿದ್ದೆ ಬಾರದ ನೀರಸ ಇರುಳುಗಳ
ಅಚ್ಚಳಿಯದೆ  ನಿಂತಿರುವೆ ಸಹೃದಯರ ಮನದಲ್ಲಿ
ನಿಚ್ಚಳ ಪ್ರೀತ್ಯಾದರಗಳ ಸುಂದರ ಹೂಬನದಲ್ಲಿ .
ಘಟಿಸದಿದ್ದರೆ ಚೆನ್ನಿತ್ತು ಈ ದುಃಸ್ವಪ್ನ
ಆಗಿ ಹೋದವು ಕನಸುಗಳೆಲ್ಲ ಭಗ್ನ
ಗಳಿಸಲಾರೆವು ನಾವು ನಿನ್ನಂತೆ ಜನಾನುರಾಗ
ಮುಗಿಯದು ಎಂದಿಗೂ ಸಂತಾಪ, ವಿಯೋಗ
ಬದುಕುತಿರುವೆವು ಇಲ್ಲದೆ ನಮಗೆ ಗತ್ಯಂತರ
ತಿಳಿದಿದೆ ನಮಗೆ ಶೋಕವಿದು ನಿರಂತರ
ಕಳೆಯಿತು ಕಷ್ಟದಿಂದ ವರ್ಷಗಳು ಇಪ್ಪತ್ತೆರಡು
ಕೊನರದು ಬತ್ತಿದಾ ಭಾವಗಳ ಕೊರಡು .

---  ತಾರಾ ಶೈಲೇಂದ್ರ