Thursday, April 17, 2014

ಅನುಗಾಲದ ನೆನಪು (poem)


ನೀನಿದ್ದೆ ಜೊತೆಯಲ್ಲಿ
ಕಣ್ಣಾಮುಚ್ಚಾಲೆ ಆಡುವಾಗ
ಹೊಳೆಯಲ್ಲಿ ನೀರಾಟವಾಡುವಾಗ
ಕಪ್ಪೆಚಿಪ್ಪು, ಕಲ್ಲುಗಳನ್ನು ಆರಿಸುವಾಗ .

ನೀನಿದ್ದೆ ಜೊತೆಯಲ್ಲಿ
ಶಾಲೆಗ ನಡೆದು ಹೋಗುವಾಗ
ಗೆಳತಿಯರು ಜಡೆ ಎಳೆಯುವಾಗ
ಪುಸ್ತಕದ ರಾಶಿ ಹೊತ್ತೊಯ್ಯುವಾಗ .

ನೀನಿದ್ದೆ ಜೊತೆಯಲ್ಲಿ
ಬೇಲಿ ಮುಳ್ಳು ಹೊಕ್ಕಾಗ
ಸೈಕಲ್ ತುಳಿಯುತ್ತ ಬಿದ್ದು
ಮಂಡಿಯಲ್ಲಿ ನೆತ್ತರೊಸರಿದಾಗ .

ನೀನಿದ್ದೆ ಜೊತೆಯಲ್ಲಿ
ವಧುಪರೀಕ್ಷೆ ಸಾಗುವಾಗ
ಕೆನ್ನೆಯುಬ್ಬಿಸಿ ಕೆಂಪಾದಾಗ
ಕೀಟಲೆ ಮಾಡಿ ನಗಿಸುವಾಗ .

ನೀನಿದ್ದೆ ಜೊತೆಯಲ್ಲಿ
ನನ್ನವರೊಡನೆ ಸಪ್ತಪದಿ ತುಳಿಯುವಾಗ
ಕಣ್ಣೀರಧಾರೆ ಹರಿಯುವಾಗ
ಹನಿಗಣ್ಣಿಂದ  ಬೀಳ್ಕೊಡುವಾಗ .

ನೀನಿದ್ದೆ ಜೊತೆಯಲ್ಲಿ
ಸಂಸಾರದ ನಾವೆ ತೇಲುತ್ತಿರುವಾಗ
ಮುದ್ದು ಕಂದ  ಅಳುವಾಗ
ಸಂತಸದಿಂದಿರು ಎಂದು ಹರಸಿದಾಗ .

ಈಗಲೂ ನೀನಿರುವೆ ಹೃದಯದಲ್ಲಿ
ವ್ಯತ್ಯಾಸವಿಷ್ಟೇ ......
ಆಗ ಸದಾ ಎದುರಲ್ಲಿ
ಈಗ ಬರೀ ನೆನಪಿನಲ್ಲಿ .

---  ತಾರಾ ಶೈಲೇಂದ್ರ 

ಸಮಾನಾಂತರ ರೇಖೆ (poem)

 
 
ನಾವಿಬ್ಬರೂ ಸೇರಿ ಕಂಡ
ಬಣ್ಣಬಣ್ಣದ ಕನಸುಗಳನ್ನು ನನಸಾಗಿಸದೆ
ನುಚ್ಚು ನೂರು ಮಾಡಿದ ನಿನಗೆ
ನನ್ನ ಹೃದಯದ ವೇದನೆಯನ್ನು
ಹೇಳಲಾಗದ ತೊಳಲಾಟ
ತಿಳಿಯದೆ ಗೆಳತಿ?
ಬಹುಶಃ ತಪ್ಪು ನನ್ನದೇನೋ
ನಾಣ್ಯಕ್ಕೆ ಎರಡು ಮುಖಗಳಿದ್ದರೂ
ಒಂದೇ ಎಂದು ಭ್ರಮಿಸಿದೆ
ಎಲ್ಲಿಯಾದರೂ ಸುಖದಿಂದಿರು
ಕಾಡಬಹುದೆಂಬ ಸಂಶಯ ಬಿಡು
ನನ್ನ ಹೃದಯವ
ನಾನೇ ನೋಯಿಸಬಲ್ಲೆನೆ ?
ನೀ ಹೇಳೇ ಗೆಳತಿ .
ಆದರೂ ಕೇಳುವೆ ನಾನು
ಬಾಳಸಂಗಾತಿ ಆಗುವೆನೆಂದು ಹೇಳಿ
ಸವಿಮಾತಿನಿಂದ ಮನಗೆದ್ದ ನೀನು
ನನ್ನೊಂದಿಗೆ ಸೇರಿ ಸರಳರೇಖೆಯಾಗದೆ
ಸಮಾನಾಂತರ ರೇಖೆ
ಆದುದೇಕೆ ಗೆಳತಿ?

- ತಾರಾ ಶೈಲೇಂದ್ರ





 

ಮರಳಿ ಬಾರದ ಬಾಲ್ಯ (poem)



ಬಾಲ್ಯವೆಂಬುದೆಷ್ಟು ಸುಂದರ
ಮುದ್ದು ಮಾತು ಮುಗ್ಧ ನಗುವಿನ ಹಂದರ
ಯಾರ ಅಂಕೆ ಇಲ್ಲದೆ
ಬೇಡಿದ್ದನ್ನೆಲ್ಲ ತರಿಸಿ,
ಬೇಡದ್ದನ್ನೆಲ್ಲ ಒಗೆದಾಗ ,
"ಅಯ್ಯೋ ಮಗು" ಎನ್ನುವರು.

ಆಡಿ ಹಾಡಿ
ಕುಣಿದು ನಲಿದು
ಎಲ್ಲರ ಮನರಂಜಿಸಿದ
ಸುದ್ದಿಯೇನೊ ಕೇಳಿ ತಿಳಿದೆ
ಈಗ ಅನಿಸುತ್ತದೆ
ನಾನೂ ಹಾಗೆ ಇದ್ದೆನೆ ?

ಆದರೀಗ ನಾನೇ ತಾಯಿ
ನಾ ಮಗನ ಹಿಂದೆಯೋ
ಅವನು ನನ್ನ ಬೆನ್ನಿಗೋ
ತಿಳಿಯದಾಗಿ, ಅವನೊಂದಿಗೆ
ಆಡುತ್ತಾ ಹಗಲು
ರಾತ್ರಿಯಾಗುವುದೆಷ್ಟು ಹೊತ್ತು ?

ಬಲು ತುಂಟ ಮಹರಾಯ
ಅವನ ತಾಳಕೆ
ನಾ ಕುಣಿಯಬೇಕು
ಥಕ ಥೈಯ್ಯ
ಪಾಪ , ಅವನಿಗೇನು ಗೊತ್ತು
ಅಮ್ಮನೇನು ಎಳೆ ಹುಡುಗಿಯಾ?

ಆವ ಕುಣಿದಾಗ ನಾನೂ ಕುಣಿಯಬೇಕು
ತಾ ಮಲಗಿದಾಗ , ಜಗವೇ ಮಲಗಬೇಕು
ಒಳ-ಹೊರಗೆ ದುಡಿಯುವ
ನನಗೂ ಆರಾಮ ಬೇಕು
ಅದರ ಚಿಂತೆ
ಅವನಿಗೇಕೆ ಬೇಕು?

ಒಮ್ಮೊಮ್ಮೆ ಅನಿಸುವುದುಂಟು
ನಾನೂ ನನ್ನಮ್ಮನನ್ನು
ಹೀಗೆಯೇ ಕಾಡಿರಬಹುದೆ?
ಏನಾದರೇನು
ಆ ಬಾಲ್ಯ
ಮರಳಿ ಬರಬಹುದೇ?

- ತಾರಾ ಶೈಲೇಂದ್ರ 

Monday, April 14, 2014

ಹೀಗೊಂದು ಗಣೇಶೋತ್ಸವ (short story)

 

                                      



 ಪ್ರತಿ ವರ್ಷದಂತೆ ಈ ವರ್ಷವೂ ಸಹ ನಮ್ಮ ಬಡಾವಣೆಯ ಮಕ್ಕಳು ಗಣೇಶೋತ್ಸವ ನಡೆಸಲು ಉತ್ಸುಕರಾಗಿದ್ದರು . ಅದಕ್ಕಾಗಿಯೇ ಖಾಲಿ ಬಿದ್ದಿದ್ದ ನಿವೇಶನವೊಂದನ್ನು ಹಸನು ಮಾಡಿದ್ದರು. ವಿಶೇಷ ಎಂದರೆ ಇವರ ಗಣೇಶೋತ್ಸವದ ಸಿದ್ಧತೆಗೆ ಯಾವುದೇ ಹಿರಿಯರ ಬೆಂಬಲವಾಗಲಿ, ಒತ್ತಾಸೆಯಾಗಲಿ ಇಲ್ಲ. ಏನೋ ಹುಡುಗರು ಆಸೆಗೆ ಮಾಡಿಕೊಳ್ತವೆ ಎಂಬ ಉಡಾಫೆ .
 
     ಮಕ್ಕಳೂ ಸಹ ಚಂದಾ ವಸೂಲಿ ಮಾಡಲು ಮನೆಮನೆಗೆ ತಾವೇ ಗುಂಪು ಕಟ್ಟಿಕೊಂಡು ಹೋಗುತ್ತಿದ್ದವು. ಹಾಗೆಯೇ ಈ ಬಾರಿ ಗುಂಪಿನ ಪ್ರತಿ ಸದಸ್ಯರೂ ತಲಾ ಕನಿಷ್ಠ ೨೦೦ ರೂಪಾಯಿಗಳನ್ನು ಪೋಷಕರಿಂದ ವಸೂಲಿ ಮಾಡಿ ಚಂದಾ ನೀಡುವುದೆಂದು ನಿರ್ಧಾರ ಮಾಡಿದ್ದವು. ಹಾಗಾಗಿ, ಈ ಬಾರಿ ಸ್ವಲ್ಪ ಹೆಚ್ಚು ಹಣ ಸಂಗ್ರಹವಾಗಿತ್ತು. ಮಕ್ಕಳಿಗೆ ಈ ಬಾರಿ ಸ್ವಲ್ಪ ಜೋರಾಗಿ ಗಣೇಶೋತ್ಸವ ಮಾಡಬೇಕು , ಏನಾದರೂ ಕಾರ್ಯಕ್ರಮ ನಡೆಸಬೇಕು ಎಂಬ ಇರಾದೆ.  ಈ ಹಂತದಲ್ಲಿ ಪೋಷಕರ ಸಲಹೆ ಕೇಳಿದಾಗ , ಕೆಲವು ದೊಡ್ಡ ತಲೆಗಳು ಮಕ್ಕಳ ಗುಂಪಿನೊಂದಿಗೆ ಸೇರಿ ಸಮಾಲೋಚನೆ ನಡೆಸಲಾರಂಭಿಸಿದವು  . ಕಾರ್ಯಕ್ರಮ ನಡೆಸುವ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾದವು .  ಮಕ್ಕಳಿಗೆ ತಾವೇ , ತಮ್ಮದೇ ಸಾಂಸ್ಕೃತಿಕ  ಕಾರ್ಯಕ್ರಮ ಆಯೋಜಿಸಬೇಕೆಂಬ ಆಸೆ. ದೊಡ್ಡವರಿಗೆ ಜನರನ್ನು ಆಕರ್ಷಿಸಲು ಸಂಗೀತ ಸಂಜೆ, ನೃತ್ಯ ಕಾರ್ಯಕ್ರಮ ಇತ್ಯಾದಿಗಳ ಕಡೆ ಒಲವು.  ಆದರೆ ಅವಕ್ಕೆಲ್ಲಾ ಬೇಕಾದ ಹಣ? ಅದಕ್ಕಾಗಿ ಇನ್ನಷ್ಟು ಚಂದಾ ವಸೂಲಿ ಮಾಡಬೇಕು. ನಂತರ ಚರ್ಚೆಗೆ ಬಂದ  ವಿಷಯ ಅತಿಥಿಗಳು ಯಾರು ಎಂಬುದು . ಒಬ್ಬರು ಸಿನಿಮಾ ತಾರೆಯೆಂದರೆ, ಮತ್ತೊಬ್ಬರು ಕ್ರಿಕೆಟಿಗರನ್ನು ಕರೆಸೋಣ ಎಂದರು . ರಾಜಕೀಯ ಪ್ರವೇಶ ಮಾಡಲು ಹವಣಿಸುತ್ತಿದ್ದವರೊಬ್ಬರು ರಾಜಕಾರಣಿಗಳನ್ನು ಕರೆಸಿದರೆ , ಬಡಾವಣೆಯ ಅಭಿವೃದ್ಧಿಗೆ ಸಹಾಯಕವಾಗುವುದೆಂದರು .  ಮಕ್ಕಳಿಗೋ , ಯಾಕಾದರೂ ಇವರನ್ನು ಮಧ್ಯೆ ಪ್ರವೇಶಿಸಲು ಬಿಟ್ಟೆವೋ ಎಂಬಂತಾಗಿತ್ತು .
 
     ಅಂದು ಯಾವ ನಿರ್ಧಾರಕ್ಕೂ ಬರಲಾಗದ್ದರಿಂದ , ಮುಂದಿನ ಭಾನುವಾರ ಸಭೆ ಸೇರುವುದೆಂದು ತೀರ್ಮಾನಿಸಿ, ಹಿರಿಯರೆಲ್ಲ ತಮ್ಮ ತಮ್ಮ ಕೆಲಸಕ್ಕೆ ತೆರಳಿದರು. ಮಕ್ಕಳಿಗೆ ಸಮಾಧಾನವಿಲ್ಲ. ಇರುವ ಹಣದಲ್ಲೇ ವಿಭಿನ್ನ ಕಾರ್ಯಕ್ರಮ ರೂಪಿಸಬೇಕು ಎಂಬುದು ಅವರ ಆಶಯ .  ಯಾವ ದೊಡ್ಡವರ ಸಹವಾಸವೂ ಬೇಡ . ಯಾರೂ ಸಹ ಇಲ್ಲಿ ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ಮನೆಯಲ್ಲಿ   ಬಹಿರಂಗಗೊಳಿಸಬಾರದು ಎಂದು ಎಲ್ಲರೂ ಒಪ್ಪಿಕೊಂಡರು .  ಈಗ ಪುಟ್ಟ ತಲೆಗಳೆಲ್ಲ ಒಂದುಗೂಡಿ, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡವು. ಕಾರ್ಯಕ್ರಮದ ವಿವರವನ್ನು ಗೌಪ್ಯವಾಗಿ ಇಡಬೇಕು ಎಂದು ಎಲ್ಲರೂ ಮಾತನಾಡಿಕೊಂಡರು.  ದೊಡ್ಡವರಿಗೆ 'ಬೇರೆ ಕಾರ್ಯಕ್ರಮ ಎನಿಲ್ಲ. ನಾವು ಒಂದು ಕಿರುನಾಟಕ ಆಡುತ್ತೇವೆ ಅಷ್ಟೆ ' ಎಂದು ತಿಳಿಸಿದರು. 
 
     ಗಣೇಶ ಚತುರ್ಥಿಯ ಬೆಳಿಗ್ಗೆ ಮಕ್ಕಳೆಲ್ಲ ಹೋಗಿ ಪುಟ್ಟದಾದ ಮಣ್ಣಿನ ಗಣಪತಿಯ ಮೂರ್ತಿಯನ್ನು  ತಂದು ಪ್ರತಿಷ್ಟಾಪಿಸಿ, ಪೂಜೆಯನ್ನೂ ಮಾಡಿದರು.  ಅಮ್ಮಂದಿರನ್ನು ಪುಸಲಾಯಿಸಿ , ಗೊಜ್ಜವಲಕ್ಕಿ, ರಸಾಯನ ಮಾಡಿಸಿ , ಪ್ರಸಾದ ವಿನಿಯೋಗವನ್ನು ಮಾಡಿದರು. ಸಂಜೆ ೬.೩೦ಕ್ಕೆ ನಡೆಯುವ ಕಾರ್ಯಕ್ರಮಕ್ಕೆ ಎಲ್ಲರೂ ಬಂದು ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿಕೊಂಡರು.  ಹಿರಿಯರೆಲ್ಲ 'ಏನೋ , ಹುಡುಗು ಬುದ್ಧಿ, ಏನು ಕಾರ್ಯಕ್ರಮ ಮಾಡ್ತವೋ ನೋಡೋಣ ' ಎಂದು ಚದುರಿದರು.  ಮಕ್ಕಳು ಕಾರ್ಯಪ್ರವೃತ್ತರಾದರು. 
 
    ಸಂಜೆ ೬. ೩೦ಕ್ಕೆ ಸರಿಯಾಗಿ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಮಕ್ಕಳು ತಮ್ಮ ಪೋಷಕರಿಗೆ ಅಪ್ಪಣೆ ಮಾಡಿದ್ದರಿಂದ ಎಲ್ಲರೂ ಸಮಯಕ್ಕೆ ಸರಿಯಾಗಿ ನೆರೆದರು. ಕೂರಲು ಹಾಕಿದ ಖುರ್ಚಿಗಳ ಮುಂದೆ ಖಾಲಿ ಇದ್ದ ಜಾಗವೇ ವೇದಿಕೆ. ಪುಟಾಣಿ ಲಿಖಿತ ಸುಶ್ರಾವ್ಯವಾಗಿ ಪ್ರಾರ್ಥನೆ ಹಾಡಿದಳು.  ಎಲ್ಲರೂ ಖುಷಿಯಿಂದ ಚಪ್ಪಾಳೆ ತಟ್ಟಿದರು.  ಮುಂದಿನ ಕಾರ್ಯಕ್ರಮದ ಬಗ್ಗೆ ತಿಳಿಸಲು ವಿಪಿನ್ ಎದ್ದು ನಿಂತ . "ಈ ಸಂಜೆಯ ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಸ್ವಾಗತ. ಸಾಮಾನ್ಯವಾಗಿ ಕಾರ್ಯಕ್ರಮಗಳಿಗೆ ಒಬ್ಬರನ್ನೋ , ಇಬ್ಬರನ್ನೋ ಅತಿಥಿಗಳಾಗಿ ಆಹ್ವಾನಿಸುವುದು ವಾಡಿಕೆ . ಆದರೆ ಇಂದು ನಮ್ಮೊಂದಿಗಿರುವ ಗಣ್ಯರು ೨೦ ಮಂದಿ" ಎಂದಾಗ ಎಲ್ಲರಿಗೂ ಆಶ್ಚರ್ಯ.  ವೇದಿಕೆಯಿಲ್ಲ, ಹಾಗಾದರೆ ಗಣ್ಯರೆಲ್ಲಿ ? ಆಗ ವಿಪಿನ್ "ನಮ್ಮ ಕಾರ್ಯಕ್ರಮಕ್ಕೆ ಯಾವುದೋ ತಾರೆಯರು ಅಥವಾ ರಾಜಕಾರಣಿಗಳನ್ನು ಆಹ್ವಾನಿಸುವುದಕ್ಕಿಂತ , "ಜೀವನ ಸಂಧ್ಯಾ " ವೃದ್ಧಾಶ್ರಮದ ಹಿರಿಯ ಚೇತನಗಳಾದ ಇವರನ್ನು ಆಹ್ವಾನಿಸುವುದು ಸೂಕ್ತ ಎನಿಸಿತು. ತಮ್ಮ ಇಳಿವಯಸ್ಸಿನಲ್ಲಿ ತಮ್ಮವರಿಂದ ದೂರವಿರುವ ಇವರೆಲ್ಲರಿಗೂ , ನಮ್ಮೊಡನೆ ಸ್ವಲ್ಪ ಸಮಯ ಕಳೆಯುವುದರಿಂದ ಸಂತೋಷ ಸಿಗುವುದೆಂದು ನಮಗೆಲ್ಲ ಅನಿಸಿತು. ಅವರೂ ಸಹ ಯಾವುದೇ ಹಮ್ಮು-ಭಿಮ್ಮುಗಳಿಲ್ಲದೆ ಬರಲು ಒಪ್ಪಿಗೆ ನೀಡಿದರು .  ಅವರಿಗೆಲ್ಲ ನಿಮ್ಮ ಹಾಗೂ ನಮ್ಮೆಲ್ಲರ ಪರವಾಗಿ ಸ್ವಾಗತ . ಹಾಗೆಯೇ ಪ್ರಖ್ಯಾತರನ್ನು ಸನ್ಮಾನಿಸುವುದು ನಾವೆಲ್ಲರೂ ಬಲ್ಲೆವು. ಆದರೆ, ಸದ್ದಿಲ್ಲದೇ ಸರಿಯುವ ಇರುವೆ ಹೆಗ್ಗೆಲಸ  ಮಾಡುವಂತೆ , ನಮ್ಮೆಲ್ಲರ ನಿತ್ಯಜೀವನದಲ್ಲಿ ನಮಗೆ ಸಹಾಯಕರಾದ , ಬಿಸಿಲು, ಮಳೆ, ಗಾಳಿಯನ್ನು ಲೆಕ್ಕಿಸದೆ , ತಮ್ಮ ಕರ್ತವ್ಯವನ್ನು ನಿರ್ವಂಚನೆಯಿಂದ ನಿರ್ವಹಿಸುವ 'ಅಂಚೆಯ ನಾಗಕ್ಕ' ಇಂದಿನ ಕಾರ್ಯಕ್ರಮದ ಶೋಭೆ" ಎಂದನು .  ಅದೇ ಸಮಯಕ್ಕೆ ಸರಿಯಾಗಿ ಮುಂದಿನ ಖುರ್ಚಿಗಳಲ್ಲಿ ಆಸೀನರಾಗಿದ್ದ ೨೦ ಮಂದಿ ವೃದ್ಧರೂ , ಅಂಚೆಯ ನಾಗಕ್ಕನೂ ಎದ್ದು ನಿಂತು, ಸಭಿಕರ ಕಡೆಗೆ ತಿರುಗಿ , ನಮಸ್ಕಾರ ಮಾಡಿದರು. ನಂತರ 'ಜೀವನ ಸಂಧ್ಯಾ' ದ ಹಿರಿಯ ಸದಸ್ಯೆ ಮಕ್ಕಳು ನೀಡಿದ ಶಾಲನ್ನು ನಾಗಕ್ಕನಿಗೆ ಹೊದಿಸಿ, ಹಣ್ಣಿನ ಬುಟ್ಟಿ ನೀಡುವಾಗ , ನಾಗಕ್ಕನ ಮುಖದಲ್ಲಿ ಧನ್ಯತಾಭಾವ. 
 
     ನಂತರ ಶುರುವಾಯ್ತು ಮಕ್ಕಳ ಲಘು ನಾಟಕ.  ಎಲ್ಲರ ಮನರಂಜಿಸಿದ ಮಕ್ಕಳನ್ನು 'ಜೀವನ ಸಂಧ್ಯಾ' ದ ಹಿರಿಯರು ತಬ್ಬಿ ಹರಸಿದರು. "ಇಷ್ಟು ಚಿಕ್ಕ ವಯಸ್ಸಿಗೇ ಇಂಥ ಉದಾತ್ತ ಮನೋಭಾವ ಬೆಳೆಸಿಕೊಂಡಿರುವ ನಿಮ್ಮನ್ನು ಹೆತ್ತವರು ಪುಣ್ಯವಂತರು"  ಎನ್ನುವಾಗ ಪೋಷಕರ ಕಣ್ಣುಗಳಲ್ಲಿ ನೀರಾಡಿತು .  ಈ ಬಾರಿಯ ಗಣೇಶೋತ್ಸವ ಸಾರ್ಥಕವಾಯ್ತು ಎಂಬ ಭಾವನೆ ಎಲ್ಲರಲ್ಲೂ ಮೂಡಿತ್ತು .  

---  ತಾರಾ ಶೈಲೇಂದ್ರ 
 
 

Wednesday, April 9, 2014

ಹೇಗೆ? (poem)

                 

















 ಹೃದಯದಲಿ ಹೆಪ್ಪು ಕಟ್ಟಿರೆ
 ನಿಟ್ಟುಸಿರು, ನೋವು
 ಬಾಹ್ಯದ ಆಡಂಬರ ತಂದೀತೆ
 ಸಂತಸ , ನಲಿವು ?
 ಮನಗಳ ಬೆಸೆಯುವ
 ನಿಸ್ತಂತು ಸೇತು , ತಾನೇ
 ಕದಡಿದರೆ ಭಾವನೆಗಳ ,
 ಸಂಬಂಧಗಳು ಉಳಿಯುವುದೆಂತು  ?                                   

   -  ತಾರಾ ಶೈಲೇಂದ್ರ
                

ಕಾರಣ (poem)



               ಹೇಳಿ ಹೋಗು  ಹುಡುಗಿ   ಕಾರಣ
               ಅದರಲಿ ಇರಲಿ ಒಪ್ಪ ಓರಣ 
               ತೊರೆವಾಗ ನನ್ನ ಬಾರದಾಯ್ತೆ ಕರುಣ
               ಬಾಡಿದೆ ಗೆಳತಿ  ಮನದ   ತೋರಣ .

               ಉಷೆ ಬಿಡುವ ಮೊದಲು ಕಣ್ಣ
               ಬಾನು ಚೆಲ್ಲೊ ಮೊದಲು ಬಣ್ಣ
               ಸೂರ್ಯ ರಶ್ಮಿ ತಾಗಿ ಮಣ್ಣ
               ಪಕ್ಷಿ ಧ್ವನಿ ಕೇಳಿ ಸಣ್ಣ ||ಹೇಳಿ ಹೋಗು ||

               ಹಕ್ಕಿ ಗೂಡು ಸೇರೋ ಸಮಯ
               ಆಲಿಸಿ ಗಂಗೆ-ಗೌರಿಯ ಕರೆಯ
               ರವಿ ಮುಳುಗಿ ಸೇರಿ ಧರೆಯ
               ಮನೆಯ ದೀಪ ನುಂಗಿ ತಮೆಯ ||ಹೇಳಿ ಹೋಗು ||

               ರಜನಿ ಜಾರಿ ಹೋಗೊ ಮುನ್ನ
               ಶಶಿ ಸುರಿವಾಗ ಜೇನ ಜೊನ್ನ
                ಚುಕ್ಕಿ ತಾರೆ ಬೆಳಗಿ ಹೊನ್ನ
                ಕಣ್ಣ ಹನಿಯು ಜಾರೋ ಮುನ್ನ||ಹೇಳಿ ಹೋಗು ||


                - ತಾರಾ ಶೈಲೇಂದ್ರ  
 

Tuesday, April 8, 2014

ನೀನ್ಯಾರು? (poem)

                                                       



                                    ಸುಮ್ಮನೆ ಹೀಗೆ
                                     ಬಂದವನಲ್ಲವೇ ನೀನು ?
                                     ತಟ್ಟಿದ್ದೇಕೆ ಮನದ ಕದವ ?
                                     ಬಯಸಿದ್ದೇಕೆ ನನ್ನ ಹಿತವ ?
                                     ತೋರಿದ್ದೇಕೆ ಅಂತಃಕರಣ ?
                                     ಬರೆದಿದ್ದೇಕೆ ಸ್ನೇಹದ ಭಾಷ್ಯ ?
                                     ಮಗುವಿನಂತೆ ಆ ನಿನ್ನ ನಗು
                                     ನಗುವಂತೆ ಮಾಡುವುದು ನನಗು ,
                                     ಸಣ್ಣ ಪುಟ್ಟದ್ದಕ್ಕೆ ಜಗಳ, ರಂಪ
                                     ನನ್ನೆಲ್ಲ ಕಾಟ, ಹುಡುಗಾಟ
                                     ಸಹಿಸುವ ನೀನೆ ಭೂಪ .
                                     ಇರಬಲ್ಲೆನೆ  ನಾ
                                     ನಿನ್ನ ಬಿಟ್ಟು?
                                     ಆ ಯೋಚನೆಯೇ
                                     ತರಿಸುತ್ತದೆ ನನಗೆ ಸಿಟ್ಟು .
                                      ಆದರೆ  ಸಮಾಜದ ಕಟ್ಟುಪಾಡು?
                                       ಜನ ಹಾಡಿದರೆ ಸಂಶಯದ ಹಾಡು?
                                       ನನ್ನ ಅಂತರ್ಮುಖಿ ಮನದ
                                       ಪರಿಧಿ ದಾಟಿದ ನೀನ್ಯಾರು?
                                       ಹಿತೈಷಿಯೊ, ಬಾಲ್ಯಸಖನೊ
                                       ಅಥವಾ ಭಾವಾನುಬಂಧಗಳಿಂದ  ವಿಮುಖನೋ?
                                       ಉತ್ತರಕ್ಕಾಗಿ ಹುಡುಕಿದೆ, ಬೆದಕಿದೆ .
                                       ಆಗ ನನಗನಿಸಿದ್ದು
                                       ಎಲ್ಲ ಸಂಬಂಧಗಳಿಗೆ
                                       ಹೆಸರು ಕೊಟ್ಟರೆ ಸಾಕೆ?
                                       ನಿಸ್ವಾರ್ಥ ಸ್ನೇಹಕ್ಕಿಂತಲೂ
                                       ಅನುಬಂಧ ಬೇಕೆ?


                    -   ತಾರಾ ಶೈಲೇಂದ್ರ 

Saturday, April 5, 2014

ಮಗಳಿಗೊಂದು ಪತ್ರ (short story)




  ಮುದ್ದಿನ ಮಗಳೇ ,

      ನಿನ್ನ ಪತ್ರ ತಲುಪಿತು. ಸ್ವಲ್ಪ ಆಶ್ಚರ್ಯವೂ ಆಯಿತು. ನನ್ನ ಬಿಟ್ಟು ಇರಲಾರೆನೆಂದು ಅಳುತ್ತಿದ್ದವಳು ಹಾಸ್ಟೆಲ್ ಜೀವನಕ್ಕೆ ಒಗ್ಗಿಕೊಂಡಿರುವುದು ಸಂತೋಷದ ವಿಷಯ . ೧೪ ವರ್ಷಗಳ ವೈವಾಹಿಕ ಜೀವನದ ನಂತರ , ಬಹುಶ : ನಾನೆಂದೂ ತಾಯಿಯಾಗಲಾರೆನೇನೊ ಎಂದು ಹತಾಶಳಾಗಿದ್ದ ನನ್ನ ಬಾಳಲ್ಲಿ ಬಂದ ಬೆಳಕಿನ ಕಿರಣ, ನನ್ನ ಭಾಗ್ಯನಿಧಿ ನೀನು . ಅದಕ್ಕೆಂದೇ ನಿನಗೆ "ಸಿರಿ " ಎಂದು ನಾಮಕರಣ ಮಾಡಿದೆ. ಅಂದಿನಿಂದ ಇಂದಿನವರೆಗೂ ನೀನು ನಕ್ಕಾಗ ನಕ್ಕು, ಅತ್ತಾಗ ಅತ್ತು, ನನ್ನ ಕಣ್ರೆಪ್ಪೆಯಂತೆ ಕಾದಿದ್ದೇನೆ.

     
       ಅದೆಲ್ಲ ಇರಲಿ. ನನ್ನ ಮೆಚ್ಚಿನ ಗಂಗೋತ್ರಿಯ ವಾತಾವರಣ ನಿನಗೆ ಹೇಗನಿಸಿತು? ಚಿಕ್ಕಂದಿನಲ್ಲಿ ಆ ಕುಕ್ಕರಹಳ್ಳಿ ಕೆರೆಯ ಏರಿಯ ಮೇಲೆ ಅಡ್ಡಾಡುವುದೇ ಒಂದು ಖುಷಿ ನಮಗೆ.  ಆ ಬಯಲು ರಂಗಮಂದಿರ ಇದೆಯಲ್ಲ, ಅಲ್ಲಿ ಎಷ್ಟೋ ನಾಟಕಗಳ ತಾಲೀಮು ನಡೆಯುವುದನ್ನು ನೋಡಿದ್ದೇವೆ. ಆ ಮೆಟ್ಟಿಲುಗಳನ್ನು ಹತ್ತಿ , ಇಳಿಯುತ್ತಾ , ವ್ಯಾಯಾಮ ಮಾಡುವವರನ್ನು ನೋಡುತ್ತಾ, ನಾವೂ ಸಹ ಇವನ್ನೆಲ್ಲ ಮಾಡಬೇಕೆಂಬ ಆಸೆಯಾಗುತ್ತಿತ್ತು.

      ಮನಸಿಟ್ಟು ಓದಲು ಗಂಗೋತ್ರಿಗಿಂತಲೂ ಪ್ರಶಸ್ತವಾದ ಸ್ಥಳ ಬೇರೊಂದಿಲ್ಲ ಎಂದು ನನ್ನ ಭಾವನೆ. ಅಂದ ಹಾಗೆ ಮೌನಗೌರಿಯಾಗಿದ್ದ ನೀನು ಇಷ್ಟೊಂದು ಸ್ನೇಹಿತರನ್ನು ಸಂಪಾದಿಸಿದ್ದು ಯಾವಾಗ? ಆದರೆ ಬರೆದಿರುವ ಹೆಸರುಗಳೆಲ್ಲ ಹುಡುಗಿಯರದೇ.  ಯಾಕೆ? ಯಾವ ಹುಡುಗರೂ  ಸ್ನೇಹಿತರಾಗಲಿಲ್ಲವಾ? ಅಥವಾ ನನ್ನೊಂದಿಗೆ ಹೇಳಲು ಭಯವಾ? ಹೆದರುವ ಅವಶ್ಯಕತೆಯಿಲ್ಲ. ನಿರ್ಮಲವಾದ ಸ್ನೇಹಕ್ಕೆ ಗಂಡು-ಹೆಣ್ಣೆಂಬ ಭೇದವಿಲ್ಲ. ಆದರೆ ಸ್ನೇಹಿತರ ಆಯ್ಕೆಯಲ್ಲಿ ಹುಷಾರು. ಸಹಪಾಠಿಗಳಲ್ಲಿ ಸ್ನೇಹವಿರಲಿ, ಸಲಿಗೆ ಬೇಡ, ಕಾಲೇಜಿಗೆ ಬರುವುದು ಬರೀ ಮೋಜು ಮಾಡಲಿಕ್ಕೆ ಎನ್ನುವವರ ನೆರಳೂ  ಸಹ ನಿನ್ನ ಬಳಿ ಸುಳಿಯುವುದು  ಬೇಡ. ಸಿನಿಮಾ , ಹೋಟೆಲ್ , ಪಾರ್ಕ್, ಪ್ರೀತಿ, ಪ್ರೇಮ ಇವೆಲ್ಲ ಜೀವನದಲ್ಲಿ ಮುಂದೆ ಇದ್ದದ್ದೇ.  ಆದರೆ ಒಮ್ಮೆ ವಿದ್ಯಾರ್ಥಿ ಜೀವನದಲ್ಲಿ ಎಡವಿದರೆ , ಮತ್ತೆ ಮೇಲೇಳುವುದು ಕಷ್ಟ. ನಿನ್ನ ಲಕ್ಷ್ಯವೆಲ್ಲ ನಿನ್ನ ಉನ್ನತ ವ್ಯಾಸಂಗದ ಕಡೆಗಿರಲಿ.

       ನಿನಗೆ ನೆನಪಿದೆಯಾ ಚಿನ್ನು? ನೀನು ೯ನೇ ತರಗತಿಯಲ್ಲಿರುವಾಗ ಅಜಯ್ ನೊಂದಿಗೆ ಮನೆಯ ಹೊರಗೆ ನಿಂತು ಗಂಟೆಗಟ್ಟಲೆ ಹರಟಿದ್ದಕ್ಕೆ ನಾನು ಆಕ್ಷೇಪಿಸಿದ್ದು?  ನೀನು ಅದನ್ನು ಅವಮಾನವೆಂದು ಭಾವಿಸಿ , ಅಪ್ಪನ ಬಳಿ ನಿನ್ನನ್ನು ಕಂಡರೆ ನನಗೆ ಹೊಟ್ಟೆಕಿಚ್ಚು ಎಂದು ದೂರಿದ್ದು? ನನ್ನನ್ನು ಪರಮಶತ್ರುವಿನಂತೆ ಕಾಣುತ್ತಿದ್ದುದು? ಆದರೆ , ನನಗೆಂದೂ ನೀನು ನನ್ನ ಮುದ್ದಿನ ಮಗುವೆ. ಆಗ ನಾನು ನಿನಗೆ ತಿಳಿ ಹೇಳಿದ್ದರೆ , ಅರ್ಥ ಮಾಡಿಕೊಳ್ಳುವಷ್ಟು ಪ್ರಬುದ್ಧತೆ ನಿನಗಿರಲಿಲ್ಲ. ಬಹುಶಃ ನಿನಗೆ ಈಗ ಅನಿಸುತಿರಬಹುದು ಅಮ್ಮ ಇಷ್ಟೊಂದು ಆಪ್ತಳಾಗಿ ಹೇಗೆ ಬದಲಾದಳೆಂದು .

      ನಿನಗೆ ತಿಳಿದಿರದ ವಿಷಯವೊಂದಿದೆ . ಅದೇನೆಂದರೆ ನಾನೂ ಆ ವಯಸ್ಸಿನವಳಾಗಿದ್ದಾಗ ನನ್ನಮ್ಮ ಅಂದರೆ ನಿನ್ನ ಅಜ್ಜಿಯನ್ನು ಹಾಗೇ ಅಪಾರ್ಥ  ಮಾಡಿಕೊಂಡಿದ್ದೆ. ಅಮ್ಮ ಪ್ರತಿಯೊಂದರಲ್ಲೂ ನನಗೆ ಪ್ರತಿಸ್ಪರ್ಧಿ ಎಂದುಕೊಂಡಿದ್ದೆ . ಓದಲು ಕುಳಿತಾಗ  ಕೆಲಸಕ್ಕೆ ಕರೆದರೆ ಸಿಡಿಮಿಡಿಗೊಳ್ಳುತ್ತಿದ್ದೆ . ಮನೆಗೆಲಸವನ್ನು ಮಾಡುವಾಗಲ್ಲೆಲ್ಲ ಓದಿನಲ್ಲಿ ಕಳೆಯಬೇಕಾದ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇನೆ ಎಂದುಕೊಳ್ಳುತ್ತಿದ್ದೆ . ಊರಿನಿಂದ ಅಕ್ಕ, ಭಾವ ಬಂದಾಗ ಭಾವನೊಡನೆ ಮುಖ ಕೊಟ್ಟು ಮಾತನಾಡಲು ಬಿಡದಿದ್ದುದ್ದಕ್ಕೆ ಶಪಿಸಿದ್ದೆ. ಅಷ್ಟೆಲ್ಲಾ ಆದರೂ ಅಮ್ಮನ ವಿರುದ್ಧ ಪ್ರತಿಭಟಿಸಲಾರದ ನನ್ನ  ಅಸಹಾಯಕತೆಗೆ ಚಡಪಡಿಸಿದ್ದೆ. ಎಷ್ಟಾದರೂ , ಹಿರಿಯರೆಂದು ಸಹನೆ  ತಂದುಕೊಳ್ಳುತ್ತಿದ್ದೆ . ನಂತರ ಮದುವೆಯಾಗಿ ಅತ್ತೆಯ ಮನೆಗೆ ಕಾಲಿಟ್ಟಾಗ , ಪೇಟೆಯಲ್ಲಿ ಬೆಳೆದ ಹುಡುಗಿ ಹೇಗೋ ಏನೋ ಎಂದು ಅನುಮಾನಿಸಿದವರು ಅಲ್ಪ ಸಮಯದಲ್ಲೇ ಹಳೆಯ ನಂಟೇನೋ ಎಂಬಂತೆ ನನ್ನನ್ನು ಪರಿಗಣಿಸಿದಾಗ, ಹೊಂದಾಣಿಕೆ, ಸಹನೆಯ ಪಾಠ ಕಲಿಸಿದ ಅಮ್ಮನ್ನನ್ನು ನೆನೆದು, ಅವಳಿಗೆ ಮನದಲ್ಲೇ ವಂದಿಸಿದ್ದೆ . 

        ಆದರೆ ವಿಪರೀತ ಕಟ್ಟುಪಾಡುಗಳಿಂದ  ಬೇಸತ್ತಿದ್ದ ನಾನು , ನನಗೊಂದು ಹೆಣ್ಣುಮಗುವಾದರೆ , ಅದನ್ನು ಹೇಗೆ ಬೆಳೆಸಬೇಕೆಂಬ ಕಲ್ಪನೆಯನ್ನು ಆಗಲೇ ಮಾಡಿದ್ದೆ. ಆದ್ದರಿಂದಲೇ ನೀನು ಇಷ್ಟಪಟ್ಟ ಭರತನಾಟ್ಯ, ಟ್ರೆಕ್ಕಿಂಗ್  ಇತ್ಯಾದಿಗಳಲ್ಲಿನ ಆಸಕ್ತಿಗೆ ನೀರೆರೆದು ಒತ್ತಾಸೆಯಾಗಿ ನಿಂತಿದ್ದು .  ಕಡೆಗೆ ಸ್ನಾತಕೋತ್ತರ ಪದವಿಗಾಗಿ ಮಾನಸಗಂಗೋತ್ರಿಗೆ ಹೋಗಲೆಬೇಕೆಂದಾಗ  , ಹುಟ್ಟಿದಾರಭ್ಯ ನಿನ್ನನ್ನು ಅಗಲದೆ ಇದ್ದ ನಾನು ನಿನ್ನನ್ನು ಕಳಿಸಲು ಒಪ್ಪಿದ್ದು. ಈಗ ನೀನು ನನ್ನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವಷ್ಟು ದೊಡ್ಡವಳಾಗಿರುವೆ. ಹಾಗಾಗಿ ಇದೆಲ್ಲವನ್ನೂ  ಹೇಳಿಕೊಳ್ಳುತ್ತಿದ್ದೇನೆ .

        ಯಾವುದೇ ಅವಕಾಶವಿರಲಿ, ಹೆಣ್ಣೆಂಬ ಒಂದೇ ಕಾರಣಕ್ಕೆ ಸೌಲಭ್ಯ, ಸವಲತ್ತುಗಳು ಬೇಕೆಂದು ಆಶಿಸಬೇಡ . ನಿನ್ನ ಪ್ರತಿಭೆಯಿಂದಲೇ ನೀನು ಜೀವನದಲ್ಲಿ ಏನನ್ನಾದರೂ  ಸಾಧಿಸಬೇಕೆಂಬ ಆಸೆ ನನಗೆ . ಶೋಷಣೆ ಎಲ್ಲೇ ಇದ್ದರೂ , ಅದನ್ನು ಖಂಡಿಸಿ, ತಡೆಯುವುದು ನಿನ್ನ ಧರ್ಮ. ನೊಂದವರನ್ನು ಸಂತೈಸುವ ಅವಕಾಶವಿದ್ದಲ್ಲಿ ಕಳೆದುಕೊಳ್ಳಬೇಡ . ವಿದ್ಯಾಭ್ಯಾಸವೆಂದರೆ ಬರೀ ಪುಸ್ತಕ ಜ್ಞಾನ ಅಲ್ಲ, ಜೀವನವನ್ನು ಒಳ್ಳೆಯ ದೃಷ್ಟಿಯಿಂದ ನೋಡುವುದೂ ಒಂದು ವಿದ್ಯೆಯೇ. ಅದನ್ನು ಮೈಗೂಡಿಸಿಕೊ . ನಿನ್ನ ಒಳಿತು ಕೆಡುಕುಗಳು ನಿನ್ನ ಕೈಯಲ್ಲೇ ಇವೆ.   ಪಾಠ ಪ್ರವಚನಗಳನ್ನು ಗಮನವಿಟ್ಟು ಕೇಳು. ಮನವೆಂಬ ಮರ್ಕಟವನ್ನು ಕಟ್ಟಿ ಹಾಕು. ನಿನಗೆ ಕೊಟ್ಟಿರುವ ಸ್ವಾತಂತ್ರ್ಯ ಸ್ವೇಚ್ಛೆಯಾಗದಿರಲಿ. ಮನಸ್ಸನ್ನು ಪ್ರಶಾಂತವಾಗಿರಿಸಲು  ಪ್ರತಿ ದಿನ ಸ್ವಲ್ಪ ಹೊತ್ತು ಧ್ಯಾನ ಮಾಡುವುದನ್ನು ಮರೆಯಬೇಡ .

         ಅರೆರೆ ಇದೇನು? ಅಮ್ಮ ಇಷ್ಟೊಂದು ಕೊರೆಯುತ್ತಿದ್ದಾಳೆ ಎಂದುಕೊಳ್ಳಬೇಡ . ಬಹುಶಃ ನಿನ್ನ ಮಗಳು ಪ್ರಾಪ್ತ
ವಯಸ್ಕಳಾಗುವ ಸಮಯಕ್ಕೆ ನೀನೂ ನನ್ನಂತೆಯೇ ಯೋಚನೆ ಮಾಡುವೆಯೇನೊ. ಊಟ , ತಿಂಡಿ ಹೊತ್ತಿಗೆ ಸರಿಯಾಗಿ ಮಾಡು. ಆರೋಗ್ಯ ಚೆನ್ನಾಗಿ ನೋಡಿಕೋ . ಬೆಳಿಗ್ಗೆ ಅಪ್ಪನ ಜೊತೆ ಮಾತನಾಡಿದೆಯಲ್ಲ. ಅವರಿಗೆ ನಿನ್ನನ್ನು ನೋಡುವಂತಾಗಿದೆ . ತಿಂಗಳ ಕೊನೆಗೆ ಬರಬಹುದು ಇಬ್ಬರೂ ನಿನ್ನನ್ನು ನೋಡಲು. ಇದಿಷ್ಟನ್ನೂ  ಫೋನ್ ನಲ್ಲೇ ಹೇಳಬಹುದಿತ್ತು. ಆದರೆ ಮನದ ಭಾವನೆಗಳನ್ನು ಹಂಚಿಕೊಳ್ಳಲು ಪತ್ರಗಳೇ ಪ್ರಬಲ ಮಾಧ್ಯಮ ಎಂದು ನಂಬಿದವರಲ್ಲಿ ನಾನೂ ಸಹ ಒಬ್ಬಳು. ಅದಕ್ಕೆಂದೇ ಈ ಪತ್ರ. ಕೂಡಲೇ ಉತ್ತರಿಸು. ನಾವೆಲ್ಲರೂ ಒಟ್ಟಾಗಿ ಸೇರುವ ದಿನವನ್ನು ಎದುರು ನೋಡುತ್ತಿದ್ದೇನೆ .

                                                                                                                      ಇತಿ ,
                                                                                                                    
                                                                                                                   ನಿನ್ನ ಪ್ರೀತಿಯ ಅಮ್ಮ 

Thursday, April 3, 2014

ಮಸಕು ( fiction)

                                  
                                                            
 
          
        ಧಡಧಡನೆ ಮೆಟ್ಟಿಲೇರಿ ತನ್ನ ಬಟ್ಟೆಗಳನ್ನು ಸೂಟ್ ಕೇಸ್ ಗೆ ತುಂಬುತ್ತಿದ್ದ ಸುರಭಿಗೆ ತನ್ನ ಕೆನ್ನೆ ತೋಯಿಸುತ್ತಿದ್ದ ಕಣ್ಣೀರನ್ನು ತೊಡೆಯುವತ್ತಲೂ  ಗಮನವಿರಲಿಲ್ಲ. ತಲೆಯಲ್ಲಿ ಇದ್ದದ್ದು ಒಂದೇ ಯೋಚನೆ " ನಾನೆಲ್ಲಿ ಎಡವಿದೆ ?". ಇದು ಮೊದಲ ಬಾರಿಯೇನಲ್ಲ . ಹಿಂದೆಯೂ  ಸಾಕಷ್ಟು ಬಾರಿ ಅನಿಸಿದ್ದುಂಟು . ಆದರೆ ಈ ಮುಂಜಾನೆ ನಡೆದ ಘಟನೆ ಅವಳಿಗೆ ಬೇಸರವೆನಿಸಿತ್ತು . ಗಂಡ-ಹೆಂಡಿರ ನಡುವಿನ ಮಾಮೂಲಿ ಜಗಳವೆಂದು ಕೊಂಡದ್ದು ಅವಳ ತಂದೆ ತಾಯಿಯನ್ನು ಮೂದಲಿಸುವ ಕಡೆಗೆ ತಿರುಗಿದಾಗ ಅವಳು ತನ್ನ ತಾಳ್ಮೆ ಕಳೆದುಕೊಂಡಿದ್ದು, "ನನ್ನಪ್ಪ ಅಮ್ಮನ ಬಗ್ಗೆ ಮಾತನಾಡುವ ಹಕ್ಕು ನಿನಗಿಲ್ಲ " ಎಂದಾಗ ಗಂಡ ಎನಿಸಿಕೊಂಡವನು ಅಬ್ಬರಿಸಿದ್ದ "ಹಾಗಿದ್ದರೆ ಅಲ್ಲೇ ಹೋಗಿರು. ನಾನಿಲ್ಲಿ ನೆಮ್ಮದಿಯಾಗಿ ಇರುತ್ತೀನಿ ".  ತಾನೂ "ನಿನ್ನ ಹಂಗಿನಲ್ಲಿ ನಾನೇನು ಬಾಳಬೇಕಿಲ್ಲ . ನನಗೂ  ಒಂದು ಉದ್ಯೋಗ ಇದೆ. ಖಂಡಿತ ಹೋಗ್ತೀನಿ " ಎಂದು ಪ್ರತಿವಾದಿಸಿದಾಗ , ರಪ್ಪನೆ ಬಾಗಿಲು ಹಾಕಿಕೊಂಡು ಅವನು ಆಫೀಸಿಗೆ ಹೋಗಿದ್ದ.


      ಸುರಭಿಗೆ ಆಶ್ಚರ್ಯವಾಗಿತ್ತು .  ಸುಹಾಸ ಇಷ್ಟೊಂದು ಬದಲಾಗಿದ್ದು ಯಾವಾಗ ? ತಾಯ್ತಂದೆಯ ಮಾತನ್ನೂ , ಅವರ ಆಸೆಗಳನ್ನೂ  ಧಿಕ್ಕರಿಸಿ , ಮೆಚ್ಚಿದ ಸುಹಾಸನ ಕೈ ಹಿಡಿದಾಗ ಸ್ವರ್ಗಕ್ಕೆ ಮೂರೇ ಗೇಣೆನಿಸಿತ್ತು . ಇಷ್ಟವಿಲ್ಲದ ಸೊಸೆಯೆಂದು ಅತ್ತೆ ಎಲ್ಲ ರೀತಿಯ ಕಷ್ಟ ಕೊಟ್ಟಾಗಲೂ , ಅವನ್ನೆಲ್ಲ ಗಂಡನ ಬಳಿ ಹೇಳಿ ಅವನ ಮನಸ್ಸನ್ನು ರಾಡಿಗೊಳಿಸುವುದು ಸರಿಯಲ್ಲ ಎಂದು ಸುಮ್ಮನಿದ್ದಳು. ಪ್ರೀತಿಸುವ ಗಂಡನಿದ್ದರೆ ಸಾಕು, ಯಾವುದೇ ಸಂಕಷ್ಟ ಎದುರಿಸಲು ಸಿದ್ಧ ಎಂದುಕೊಂಡಿದ್ದಳು . ತನ್ನನ್ನು ಹೆತ್ತವರು ಪಾರ್ಟಿ , ಕ್ಲಬ್  ಎಂದು ಸುತ್ತುವಾಗ , ಅಕ್ಕರೆ ತೋರುವವರಿಲ್ಲದ ಮನೆಯಲ್ಲಿ ಸಿಕ್ಕ ಅಜ್ಜಿಯ ಪ್ರೀತಿಯೇ ಅವಳಿಗೆ ಆಸರೆಯಾಗಿತ್ತು. ಅಜ್ಜಿ ತೀರಿಕೊಂಡ ನಂತರ ಅದೂ  ತಪ್ಪಿಹೋಗಿತ್ತು. ಹಾಗಾಗಿ, ಅತ್ತೆಯ ಮನೆಯಲ್ಲಿಯಾದರೂ  ತಾನು ಬಯಸಿದ ಪ್ರೀತಿ ಸಿಗಬಹುದೆಂದು ಆಶಿಸಿದ್ದಳು. ಇದ್ದ ನಾದಿನಿಯೂ  ಮದುವೆಯಾಗಿ ದೂರದೂರಿಗೆ ಹೊರಟಾಗ , ಸುಹಾಸನನ್ನು ಬಿಟ್ಟರೆ ಬೇರಾರೂ  ತನಗಿಲ್ಲವೆಂದು ಕೊರಗುತ್ತಿದ್ದಳು. ತಾನು ಕಳೆದುಕೊಂಡ ಬಾಲ್ಯ, ದಕ್ಕದ ವಾತ್ಸಲ್ಯವನ್ನು ಸುಹಾಸ ನೀಡಿ ಮಗುವಿನಂತೆ ನೋಡಿಕೊಂಡಿದ್ದ ಮದುವೆಯಾದ ಹೊಸತರಲ್ಲಿ.

      ಅವರ ಇಷ್ಟಕ್ಕೆ ವಿರುದ್ಧವಾಗಿ ಸುಹಾಸನನ್ನು ಮದುವೆಯಾದಾಗ ಸಿಟ್ಟಾಗಿದ್ದ ಅಪ್ಪ-ಅಮ್ಮ ಚೊಚ್ಚಿಲ ಬಾಣಂತನ ಮಾಡಲೂ ಕರೆಯದಿದ್ದಾಗ ಸುಹಾಸ ನೊಂದು , ತನ್ನ ಸೋದರತ್ತೆಯನ್ನು ಕರೆಸಿ ಬಾಣಂತನ ಮಾಡಿಸಿದ್ದ . ಅತ್ತೆಯಂತೂ ಮಗ ಮಾತ್ರ ನನ್ನವನು, ಸೊಸೆ-ಮೊಮ್ಮಗ ತನಗೆ ಯಾರೂ ಅಲ್ಲವೇನೊ ಎಂಬಂತೆ ಇದ್ದುಬಿಟ್ಟರು . ಮಗು ಅಳುತ್ತಿದ್ದರೆ "ರಾಕ್ಷಸನ ಹಾಗೆ ಅರಚುತ್ತಾನೆ "  ಎಂದು ಬಯ್ಯುತ್ತಿದ್ದರು.  ಸೊಸೆ ಬೇಡ ಎನ್ನುತ್ತಿದ್ದವರು ಮಗಳ ಮದುವೆಗೆ ಹಣ ಬೇಕಾದಾಗ ಸಾಲ ತೆಗೆದುಕೊಡು ಎಂದು ಒತ್ತಾಯಿಸಿದ್ದರು. ವರದಕ್ಷಿಣೆಯ ಹಣ ಹೀಗಾದರೂ  ಸಂದಾಯವಾಗಲೆಂಬ ಅಭಿಪ್ರಾಯ ಅವರದು. ಆದರೆ ಸುರಭಿ ತನ್ನ ನಾದಿನಿಯ ಮದುವೆ  ಎಂದು ಭವಿಷ್ಯ ನಿಧಿಯಿಂದ ಸಾಲವನ್ನು ಸಂತೋಷದಿಂದಲೇ ತೆಗೆದುಕೊಟ್ಟಿದ್ದಳು . ಆರ್ಥಿಕ ಮುಗ್ಗಟ್ಟಿನಿಂದ ಮನೆಗೆಲಸದವಳನ್ನು ಬಿಡಿಸಿದ್ದಳು. ಕೈಮಗುವನ್ನು ಇಟ್ಟುಕೊಂಡು ಮನೆಕೆಲಸ, ಆಫೀಸಿನ ಕೆಲಸ, ಮಗುವಿನ ಕೆಲಸ ಎನ್ನುವಷ್ಟರಲ್ಲಿ ಇಡೀ ದಿನವೇ ಕಳೆದುಹೋಗಿರುತ್ತಿತ್ತು . ಈ ಮಗು ಯಾವಾಗ ದೊಡ್ಡದಾಗುತ್ತದೋ ಎನ್ನುವಷ್ಟರ ಮಟ್ಟಿಗೆ ಸಾಕಾಗಿತ್ತು. ಬೆಳಿಗ್ಗೆ ೫ ಗಂಟೆಗೆ ಎದ್ದರೆ, ತಿಂಡಿ, ಅಡಿಗೆ, ಮಗನನ್ನು ಕ್ರೆಷ್ ಗೆ ಬಿಡಲು ಅವನ ತಿಂಡಿ, ಓಟದ ಡಬ್ಬಿ ಹಾಕಿಕೊಂಡು ಸುಹಾಸನೊಂದಿಗೆ ಬೈಕ್ ನಲ್ಲಿ ಹೋಗಿ, ಮಗುವನ್ನು ಬಿಟ್ಟು, ನಂತರ ಆಫೀಸಿಗೆ ಹೋಗುತ್ತಿದ್ದಳು.
ಬೆಳಿಗ್ಗೆ ಏನೋ ಸುಹಾಸ ಆಫೀಸಿನ ಬಳಿ ಬಿಡುತ್ತಿದ್ದ. ಆದರೆ ಸಂಜೆ ಅವನು ಸಿಗುತ್ತಿರಲಿಲ್ಲ . ಇವಳು ಬಸ್ ಹಿಡಿದು, ಮಗುವನ್ನು ಕರೆದುಕೊಂಡು ಬಂದು, ರಚ್ಚೆ ಹಿಡಿಯುತ್ತಿದ್ದ ಅವನನ್ನು ರಮಿಸಿ, ತಿಂಡಿ ತಿನ್ನಿಸುವುದರೊಳಗೆ, ಹೈರಾಣಾಗಿರುತ್ತಿತ್ತು ಅವಳ ಜೇವ. ಇಷ್ಟಾದರೂ , ಅತ್ತೆ ಎನಿಸಿಕೊಂಡವರು ಸಹಾಯ ಮಾಡುವುದಿರಲಿ, "ಈಗ ಬಂದ್ಯಾ?" ಎಂತಲೂ ಕೇಳುತ್ತಿರಲಿಲ್ಲ .

       ಮಗ ಸ್ಕಂದ ಒಬ್ಬನೇ ಅವಳ ಬಾಳಿನಲ್ಲಿ ಬಂದ  ಆಶಾಕಿರಣವಾಗಿದ್ದ. ಅವನು ಬೆಳೆದು ಶಾಲೆಗ ಹೋಗಲಾರಂ ಭಿಸಿದಾಗ , ಸುರಭಿಗೆ ಅವನ ವಿದ್ಯಾಭ್ಯಾಸದ  ಜವಾಬ್ದಾರಿ ಹೆಗಲಿಗೇರಿತು. ಸುಹಾಸ ಈ ಮೊದಲೇ ಕೈ ಕೊಡವಿಬಿಟ್ಟಿದ್ದ , "ನಾನಂತೂ ಮಗುವಿನ ಓದಿನ ಕಡೆ ಗಮನ ಕೊಡಲಾರೆ. ನಂಗೆ ಅಷ್ಟು ತಾಳ್ಮೆ ಇಲ್ಲ " ಎಂದು.  ಈಗೀಗ ಸಂಜೆ ಅಡಿಗೆ ಕೆಲಸ, ಮಾರನೆಯ ದಿನದ ವೈಭವಕ್ಕೆ ತಯಾರಿ, ಕಸ ಮುಸುರೆ, ಜೊತೆಗೆ ಮಗುವಿನ ಓದಿನಿಂದ ಅವಳಿಗೆ ಸಾಕು ಸಾಕಾಗಿತ್ತು. ಅಪರೂಪಕ್ಕೊಮ್ಮೆಯಾದರೂ ಸಹಾಯ ಮಾಡುತ್ತಿದ್ದ ಸುಹಾಸ , ಅತ್ತೆ " ನೀನೇನು ಮನೆಗೆಲಸದವನೇನೊ ಅವೆಲ್ಲ ಕೆಲಸ ಮಾಡಲಿಕ್ಕೆ " ಎಂದಾಗ ಅದನ್ನೂ ನಿಲ್ಲಿಸಿದ್ದ .  "ಮನೆಗೆಲಸ ಹೆಂಗಸರಿಗೇ  ಸೇರಿದ್ದು . ಯಾರೂ ಮಾಡದಂಥ  ಕೆಲಸ ನೀನೇನು ಮಾಡ್ತೀಯ? ನನ್ನ ಲೇಡಿ ಕಲೀಗ್ಸ್ ಇಲ್ವಾ? ಅವರೂ ನಿನ್ನಂತೆ ಎರದು ಕಡೆ ಕೆಲಸ ಮಾಡಲ್ವಾ?" ಎಂದಿದ್ದ

       ಆದರೆ ಇತ್ತೀಚಿಗೆ ಮಗನೆದುರು ಜಗಳವಾಡಿದರೆ , ಬೆಳೆಯುವ ಮಗುವಿನ ಮೇಲೆ ಕೆಟ್ಟ ಪರಿಣಾಮ ಆಗಬಹುದೆಂದು ಹೆದರಿ, ಸುರಭಿ ತುಟಿ ಹೊಲಿದುಕೊಂಡಿದ್ದಷ್ಟೂ , ಸುಹಾಸನ ದರ್ಪ ಹೆಚ್ಚಾಗುತ್ತಿತ್ತು. ಒಮ್ಮೆಯಂತೂ ಯಾವುದೋ ಹಣ ಬಂತೆಂದು ಕಿಟಕಿ ಬಾಗಿಲುಗಳಿಗೆ ಹೊಸ ಪರದೆಗಳನ್ನು ಕೊಂಡು ತಂದಾಗ, ಹಣವನ್ನು ಅವನ ಕೈಗೆ ಕೊಡಬೇಕಿತ್ತೆಂದು  ಹಾರಾಡಿದ.  "ಹೆಣ್ಣಿಗೆ ಸ್ವಾತಂತ್ರ್ಯ ಕೊಟ್ಟರೆ ಹೀಗೇ ಆಗುವುದು" ಎಂದು ಅತ್ತೆ  ಒಗ್ಗರಣೆ  ಹಾಕಿದರು. ತನ್ನ ಸ್ವಂತಕ್ಕಾಗಿ ಏನಾದರೂ  ಕೊಳ್ಳುವ ಬದಲು ಮನೆಗಾಗಿ ಕೊಂಡು ತಂದಿದ್ದಕ್ಕೆ ಸುರಭಿಗಾಗಿ ಪಶ್ಚಾತ್ತಾಪವಾಗಿತ್ತು . ತಾನೂ ಎಲ್ಲ ಸ್ನೇಹಿತೆಯರಂತೆ ಹೋಟೆಲ್, ಸಿನಿಮಾ  ಎಂದು  ಸುತ್ತಿದ್ದರೆ  ಚೆನ್ನಾಗಿತ್ತು. ನಾಲ್ಕು ಕಾಸು ಉಳಿದರೆ ಅನುಕೂಲವೆಂದು ತನ್ನಾಸೆಗಳನ್ನು ಕೊಂದು ಬದುಕುತ್ತಿದ್ದರೂ ,  ಇವರ ಮಾತಿನ ವೈಖರಿ ಹೀಗಿದೆಯಲ್ಲ ಎಂಬ ಸಂಕಟ ಬಯಲಿನಲ್ಲಿ ಚೆಲ್ಲಿದ ನೀರಿನಂತಾಗಿತ್ತು .

        ನಿತ್ಯ ಮುಂಜಾನೆಯಂತೆಯೇ  ಅಂದೂ  ಕೂಡ . ಏನೇನೂ  ಬದಲಾಗಿಲ್ಲ. ಆದರೆ ಅಂಗಿಯ ಗುಂಡಿ ಕಿತ್ತು ಹೋಗಿದೆ , ಹಾಕಿಲ್ಲವೆಂದು ಜಗಳ ತೆಗೆದಿದ್ದ ಸುಹಾಸ, "ಸುಮ್ಮನೆ ಯಾವುದಾದರೂ  ಹಳ್ಳಿ ಹುಡುಗಿಯನ್ನು ಮದುವೆಯಾಗಿದ್ದರೆ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು" ಎಂದು ಅವನು ಗೊಣಗಾಡುವುದನ್ನು ಕೇಳಿ ಸುರಭಿ ಸಿಟ್ಟಿಗೆದ್ದಿದ್ದಳು .  "ನಾನೂ ಅಷ್ಟೇ . ನೀನು ಬೇರೆ ಗಂಡಸರಂತಲ್ಲ . ನನ್ನ ಭಾವನೆಗಳಿಗೆ ಸ್ಪಂದಿಸಿ, ಗೌರವಿಸಿ, ನಿನ್ನ ಮನಸಲ್ಲಿ, ಹೃದಯದಲ್ಲಿ ನನಗೊಂದು ಉನ್ನತ ಸ್ಥಾನ ಕೊಡುತ್ತೀಯ ಅಂತ ಅಂದುಕೊಂಡಿದ್ದೆ . ಆದರೆ ನೀನೂ ಬೇರೆ ಗಂಡಸರಂತೆ ಹೊರಗೆ ದುಡಿಯುವ ಹೆಂಡತಿ ಮನೆಯಲ್ಲಿ ನಿನ್ನ ಸೇವೆಯನ್ನು ಚಾಚೂ ತಪ್ಪದೆ ಮಾಡಬೇಕು ಎಂಬ ಆಸೆಯುಳ್ಳವನು" ಎಂದಿದ್ದಳು . ಅದಕ್ಕೆ ಅವನು  ಬಿಟ್ಟಗಣ್ಣುಗಳಿಂದ  ಕೆಂಡ ಕಾರಿ, ಸುಡುವವನಂತೆಯೇ ನೋಡಿದ್ದ . ಸುರಭಿಗೆ ದಿನೇ ದಿನೇ ತನ್ನ ಜೀವನದಲ್ಲಿ ಪಾತಾಳಕ್ಕೆ ಕುಸಿಯುತ್ತಿದ್ದೇನೇನೊ ಅನಿಸುತ್ತಿತ್ತು .  ಅಲ್ಲೇ ಇದ್ದ ಹಾಸಿಗೆಗೆ ಒರಗಿದಾಗ ತಲೆ ಸಿಡಿಯುತ್ತಿತ್ತು . ಒಂದು ಲೋಟ ಕಾಫಿಯನ್ನಾದರೂ ಮಾಡಿಕೊಂಡು ಕುಡಿಯೋಣವೆಂದರೆ ಮುಂಜಾವಿನಿಂದ ಪುರುಸೊತ್ತಿರಲಿಲ್ಲ .  ಹಾಗೇ  ಯೋಚಿಸುತ್ತಿದ್ದವಳಿಗೆ "ಸುರಭಿ, ತಗೋಮ್ಮಾ ಬಿಸಿ ಕಾಫಿ ಕುಡಿದು ಸುಧಾರಿಸಿಕೋ . ಇವತ್ತು ಬರಲ್ಲ ಅಂತ ಆಫೀಸಿಗೆ ಫೋನೆ  ಮಾಡಿ ಹೇಳಿಬಿಡು . ನಿನ್ನ ಜೊತೆ ಸ್ವಲ್ಪ ಮಾತಾಡೋದಿದೆ " ಎನ್ನುತ್ತಾ ಮಾವ ಕಾಫಿ ಲೋಟ ಕೈಗಿತ್ತರು. ಇವಳಿಗೋ ಆಶ್ಚರ್ಯ . ಮನೆಯಲ್ಲಿ ಯಾವತ್ತೂ ಬಾಯಿ ಬಿಚ್ಚದ ಮಾವ ನನಗೆ ಕಾಫಿ ತಂದುಕೊಡುವುದೇ?  "ನೀವ್ಯಾಕೆ ಮಾಡೋಕೆ ಹೋದ್ರಿ ಮಾವ? ನಾನು ಮಾಡಿಕೊಳ್ತಿದ್ದೆ "  ಎನ್ನುತ್ತಾ ಕಣ್ಣೊರೆಸಿಕೊಂಡಳು.

        ಮಾವ "ನಾನು ಹೀಗೆ ಹೇಳ್ತೀನಿ ಅಂತ ಬೇಸರ ಮಾಡಿಕೊಳ್ಳಬೇಡಮ್ಮ. ಈ ಜಗಳದಿಂದ ಯಾರಿಗೂ ಪ್ರಯೋಜನವಿಲ್ಲ. ನೀನು ಈ ಮನೆಯ ಮಹಾಲಕ್ಷ್ಮಿ. ಸದಾ ನಗುನಗುತ್ತಾ ಇರಬೇಕು. ಅದೇ ನನ್ನಾಸೆ. ನಾನು ಹೇಳಿದ ಹಾಗೆ ಕೇಳು. ಇನ್ನು ಮೇಲೆ ಮನೆಕೆಲಸದಲ್ಲಿ ನನ್ನ ಕೈಲಾದಷ್ಟು ಸಹಾಯ ಮಾಡ್ತೀನಿ .  ಸೊಪ್ಪು , ತರಕಾರಿ ಕೆಲಸ ನಾನು ನೋಡ್ಕೋತೀನಿ . ನೀನು ಇಷ್ಟು ವರ್ಷ ಎಲ್ಲರಿಗಾಗಿ ಬದುಕಿದ್ದು ಸಾಕು. ಇನ್ನು ಮೇಲೆ ನಿನಗಾಗಿ ಬದುಕು. ನೀನ್ಯಾಕೆ ಸುಹಾಸ ಹೇಳಿದ್ದಕ್ಕೆಲ್ಲಾ ಕೋಲೆ  ಬಸವನ ಹಾಗೆ ತಲೆ ಆಡಿಸ್ತೀಯ? ನಿನ್ನ ಅಭಿಪ್ರಾಯವನ್ನೂ ತಿಳಿಸು. ಅವನ ಯಾವುದೇ ಮಾತು ನಿನಗೆ ಹಿಡಿಸದಿದ್ದರೆ ಕೂಡಲೇ ಅದನ್ನು ಹೇಳಿಬಿಡು . ಇಷ್ಟು  ವರ್ಷಗಳಾದರೂ ಅವನ ಇಷ್ತಾನಿಷ್ಟಗಳಂತೆ ನಡೆಯುತ್ತಿದ್ದೆಯಲ್ಲ ? ಅವನು ನಿನ್ನ ಭಾವನೆಗಳಿಗೆ ಕೊಟ್ಟ ಬೆಲೆ ಏನು? ನಿನಗೆ ಸ್ವಂತ ಆಸೆಗಳೇ ಇಲ್ವಾಮ್ಮಾ? ಮಗುವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದೆಂದು ಎಲ್ಲವನ್ನೂ ಸಹಿಸಿಕೊಳ್ಳುತ್ತೀಯಲ್ಲ , ಅದರಿಂದಾಗುವ ಅನಾಹುತ ಗೊತ್ತಾಮ್ಮಾ? ನಿನ್ನ ಮಗ ಅಪ್ಪ ಮಾಡುತ್ತಿರುವುದು ಸರಿ ಎಂದು ತಿಳಿದು,  ಮುಂದೆ ಮತ್ತೊಬ್ಬ ಸುಹಾಸ ಆಗುತ್ತಾನೆ. ಹೆಣ್ಣು ಮಕ್ಕಳಿಗೆ ಗೌರವ ಕೊಡುವುದನ್ನು ಅವನು ಕಲಿಯೋದಿಲ್ಲ.  ನೋಡು ಇನ್ನು ಮೇಲೆ ನೀನೂ ಆಗಾಗ ಸ್ನೇಹಿತೆಯರೊಂದಿಗೆ ಹೊರಗೆ ಹೋಗಿ ಬಾ. ಸ್ವಲ್ಪ ವ್ಯವಹಾರ ಜ್ಞಾನ ಬೆಳೆಸಿಕೋ  ತಾಯಿ . ಸಂಬಳ ಪೂರಾ ತಂದುಕೊಟ್ಟು ಖರ್ಚಿಗೆಂದು ಅವನ ಮುಂದೆ ನಿಲ್ಲುವ ಬದಲು, ನಿನ್ನ ಖರ್ಚಿಗೆಂದು ಸ್ವಲ್ಪ ಉಳಿಸು.  ಸುಹಾಸ ನನ್ನ ಮಗನೇ ಇರಬಹುದು. ಆದರೆ ನೀನು ಸ್ವಲ್ಪ ಹುಷಾರಾಗಿದ್ದಿದ್ರೆ , ಅವನು ನಿನ್ನನ್ನು ಇಷ್ಟೊಂದು ಏಮಾರಿಸಲು ಆಗ್ತಿರಲಿಲ್ಲ . ನಿನ್ನ ಬ್ಯಾಂಕ್ ಖಾತೆಯಲ್ಲೂ ಅಷ್ಟಿಷ್ಟು ಹಣ ಇರ್ತಿತ್ತು , ಈಗ ನೀನು ತವರು ಮನೆಗೆ ಹೋಗಿ ಏನು ಸಾಧಿಸಿದಂತಾಗುತ್ತೆ ? ಮೆಚ್ಚಿ ಮದುವೆಯಾದವರು ನೇವು. ಈಗ ಒಬ್ಬರನ್ನೊಬ್ಬರು ನೋಡಿದರೆ ಬೆಚ್ಚಿ ಬೀಳುತ್ತೀರಲ್ಲ . ನಾನು ಹೇಳಿದ್ದನ್ನು ಯೋಚನೆ ಮಾಡು. ನನ್ನ ಪಾಲಿಗೆ ನೀನು ಈ ಮನೆ ಸೊಸೆ ಅಲ್ಲ, ಮಗಳು" ಅನ್ನುತ್ತಾ ಹೊರಗೆ ಹೋದರು. ಸುರಭಿಗೆ ಮಾವನವರ ಮಾತಿನಲ್ಲಿ ಸತ್ವವಿದೆ ಎಂದು ಅರಿವಾಯಿತು.

        "ಹೌದು . ಈ ಸಮಾಜದಲ್ಲಿ ಬಾಳಬೇಕೆಂದರೆ ಕೊಂಚವಾದರೂ ಸ್ವಾರ್ಥಿಯಾಗಬೇಕು. ಮಾವ ಹೇಳಿದ್ದು ನಿಜ. ಇಲ್ಲದಿದ್ದರೆ ಬಗ್ಗಿರುವ ಬೆನ್ನಿಗೆ ಗುದ್ದೊಂದರಂತೆ ಬೀಳುತ್ತಲೇ ಇರುತ್ತವೆ. ಜೀವನ ಎಂದರೆ ಬರೀ ಗಂಡ-ಮನೆ-ಮಕ್ಕಳು ಅಷ್ಟೇ ಅಲ್ಲ. ನನಗಾಗಿ, ಕೇವಲ ನನಗಾಗಿ ಕೆಲ ಸಮಯ ನಿಗದಿ ಪಡಿಸಿಕೊಳ್ಳಬೇಕು. ಮರೆತಂತಾಗಿರುವ ನನ್ನ ಹವ್ಯಾಸಗಳಿಗೆ ಮರುಜೀವ ಕೊಡಬೇಕು. ನಾನು ಬದಲಾಗಬೇಕು. ಬದಲಾಗಲೇ ಬೇಕು " ಹೀಗೆ ಸುರಭಿಯ ಯೋಚನಾಲಹರಿ ಸಾಗಿತ್ತು.  ಇವೆಲ್ಲ ವಾಸ್ತವಕ್ಕೆ ಒಮ್ಮೆ ಹೌದೆನಿಸಿದರೆ  ಮತ್ತೊಮ್ಮೆ ಬೇಡವೆನಿಸುತ್ತಿತ್ತು.  ಆಫೀಸಿಗೆ ಫೋನಾಯಿಸಿ ೨ ಗಂಟೆ ತಡವಾಗಿ ಬರುತ್ತೇನೆ ಎಂದು ತಿಳಿಸಿದಳು.  ಸ್ಕಂದನ್ನನ್ನು ಕ್ರೆಷ್ ಗೆ ಬಿಟ್ಟು ಆಫೀಸಿನ ದಾರಿ ಹಿಡಿದಳು. ನಿತ್ಯವೂ ನೀರು ಸೋಸಿದಂತೆ  ನಡೆಯುತ್ತಿದ್ದ ಕೆಲಸವಿಂದು ವೇಗವಾಗಿ ಸಾಗಲಿಲ್ಲ. ಸಂಜೆ ಹೊರಡುವ ಸಮಯವಾದರೂ ಕೆಲಸ ಮುಗಿಯಲಿಲ್ಲ. ಸುಹಾಸನಿಗೆ ಫೋನ್ ಮಾಡಿ "ಸಂಜೆ ಮೀಟಿಂಗ್ ಇದೆ. ಮಗನನ್ನು ಕ್ರೆಷ್ ನಿಂದ ಮನೆಗೆ ಕರೆದುಕೊಂಡು ಹೋಗಿ " ಎಂದಷ್ಟೇ ಹೇಳಿ , ಅವನ ಪ್ರತಿಕ್ರಿಯೆಗೂ ಕಾಯದೆ ಫೋನ್ ಇಟ್ಟಳು. ಮತ್ತೆ ಸುಹಾಸ ಎಷ್ಟೇ ಬಾರಿ ಫೋನ್ ಮಾಡಿದರೂ  ಅಟೆಂಡರ್ ರಾಮಯ್ಯ "ಮೇಡಂ ಮೀಟಿಂಗ್ ನಲ್ಲಿದ್ದಾರೆ  " ಎಂಬ ಉತ್ತರ ಕೊಟ್ಟರು.

    ಸುಹಾಸ "ಏನೋ ಬದಲಾಗಿದೆ" ಎಂದುಕೊಂಡು, ತನ್ನ ಸಂಜೆಯ ಸುತ್ತಾಟವನ್ನು ಮೊಟಕುಗೊಳಿಸಿ, ಮಗನನ್ನು ಕರೆದುಕೊಂಡು ಬರಲು ಅನುವಾದ. ಸುರಭಿ ಎಲ್ಲರಿಂದ ಮಾನಸಿಕವಾಗಿ ದೂರಾಗಿ ನಿರ್ಲಿಪ್ತಳಾಗಿದ್ದಳು - ತಾವರೆ ಎಳೆಯ ಮೇಲಿನ ನೀರಿನ ಹನಿಯನ್ತೆ. ಮನಸ್ಸಿನ ಮೇಲೆ ಹರಡಿದ್ದ ಮಸಕು ಹರಿಯತೊಡಗಿತ್ತು. ಆಫೀಸಿನಿಂದ ಹೊರ ಬಂದಾಗ ಸಂಜೆಯ ಸೊಬಗು ಅವಳ ಮನಸ್ಸನ್ನು ಸಂಪೂರ್ಣವಾಗಿ ಸೆರೆ ಹಿಡಿದಿತ್ತು.

- ತಾರಾ ಶೈಲೇಂದ್ರ